Sunday 4 August 2024

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ:

1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡಿಯಲ್ಲಿ ಈಶ್ವರನು ಪ್ರಕಾಶವಾಗನು, ದೆವ್ವ ದೇವರುಗಳಿಗೆ ಕಟ್ಟುವ ಕಾಣಿಕೆಯ ಹಣವನ್ನು ಎಣ್ಣೆ, ಸೀಗೆ, ಸಾಬೂನುಗಳಿಗೆ ಉಪಯೋಗಿಸಿದರೆ ಆತನು ನಮ್ಮನ್ನು ಇನ್ನೂ ಹೆಚ್ಚಾಗಿ ಒಲಿಯುತ್ತಾನೆ. ಏಕೆಂದರೆ, ಆತನಿಗೆ ಬೇಕಾದುದು ನಮ್ಮ ಹೃದಯದ ಸರಳ ಭಕ್ತಿ, ನಮ್ಮ ಕಬ್ಬಿಣದ ಪಿಠಾರಿಯ ದುಡ್ಡಲ್ಲ.

2. ಕಣ್ಣಿನ ಕಾಂತಿ, ಮನಸ್ಸಿನ ಶಾಂತಿ, ಮುಖದ ತೇಜಸ್ಸು, ಆತ್ಮದ ಓಜಸ್ಸು, ದೇಹದ ಉಲ್ಲಾಸ, ಹೃದಯದ ಉತ್ಸಾಹ ಎಲ್ಲವನ್ನೂ ಕಳೆದುಕೊಂಡು ಜೀವಶವಗಳಂತೆ ಇರುವವರಿಂದ ನಾಡಿಗಾದರೂ ಜನರಿಗಾದರೂ ಏನು ಉಪಯೋಗವಾದೀತು?

3. ಹುಟ್ಟುವುದು ಸಾಯುವುದರಂತೆಯೇ ವಿವಾಹವೂ ಜೀವನದ ಮಹಾ ಘಟನೆಗಳಲ್ಲಿ ಒಂದಾಗಿದೆ. ಮದುವೆಗೆ ಮದುವೆಯ ಸಂಭ್ರಮವೇ ಗುರಿಯಲ್ಲ, ಮುಂದಿನ ಸುಖ, ಸಮಾಜ ಸೇವೆ ಇತ್ಯಾದಿಗಳು ಅದರ ಗುರಿ. ವಿವಾಹವು ನಡೆಯುವ ಹಾದಿಯೆ ಹೊರತು, ಸೇರುವ ಮನೆಯಲ್ಲ.

4. ಆದರ್ಶವಿರುವುದು ಅದರಂತಾಗುವುದಕ್ಕೆ, ಅದಾಗುವುದಕ್ಕೆ. ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆ.

5. ಸಗಣಿಯವನೊಡನೆ ಸರಸವಾಡುವುದಕ್ಕಿಂತ ಗಂಧದವನೊಡನೆ ಗುದ್ದಾಡುವುದು ಲೇಸು. ಸರಸವಾಡಿದರೂ ಸಗಣಿಯವನೊಡನೆ ನಮಗೆ ದೊರಕುವುದು ದುರ್ವಾಸನೆ. ಗುದ್ದಾಡಿದರೂ ಗಂಧದವನಿಂದ ಪರಿಮಳ ಲಭಿಸುತ್ತದೆ.

6. ದೇವರಿಗೆ ಕೋಳಿ ಕುರಿಗಳ ಬಲಿಯೂ ಬೇಡ, ವಜ್ರ ಕಿರೀಟಗಳೂ ಬೇಡ. ಆತನಿಗೆ ಬೇಕಾದುದು ಭಕ್ತಿ. ಭಕ್ತಿಯಿಂದ ತೃಣವನ್ನು ನಿವೇದಿಸಿದರೂ ಆತನು ಸಂತೃಪ್ತನು. 

7. ಹೊಳೆಯಲ್ಲಿ ಪ್ರಯಾಣಮಾಡುವ ಮೊದಲು ದೋಣಿ ಸಾರಿಯಾಗಿದೆಯೆ ಬಿರುಕು ಬಿಟ್ಟಿದೆಯೆ ನೋಡಿಕೊಳ್ಳಬೇಕು. ನಡುಹೊಳೆಯಲ್ಲಿ ನೀರು ತುಂಬಿ ದೋಣಿ ಮುಳುಗುವಾಗ ಗೋಳಾಡಿದರೆ ಪ್ರಯೋಜನವಿಲ್ಲ.

8. ನಿಮ್ಮ ಕನ್ಯೆಯರಿಗೆ ಸೇರು ಬಂಗಾರದ ಕೊರಳ ಹಾರಕ್ಕಿಂತಲೂ ಮುದ್ದಾದ ಕನ್ನಡದ ಅಕ್ಷರಮಾಲೆಯೆ ರಮಣೀಯತರ ಅಲಂಕಾರ. ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ, ಚಿನ್ನದ ಚೆಲುವು ಹೆಣದಂತೆ.

9. ಮತ ನಮಗೊಂದು ದೊಡ್ಡ ಬಂಧನವಾಗಿದೆ. ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ.

10. ಸರ್ವ ಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಆ ಆಚಾರ್ಯ, ಆ ಧರ್ಮಶಾಸ್ತ್ರ, ಆ ಮನುಸ್ಮೃತಿ ಮೊದಲಾದವು ಏನೇ ಹೇಳಲಿ, ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.

11. ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.

ಕುವೆಂಪುರವರ ಭಗವಾನ್ ಬುದ್ಧರ ಕವಿತೆ | Kuvempu poem on Bhagavan Buddha

ಏಷ್ಯಾದ ಬೆಳಕೆಂದೇ ಜಗತ್ಪ್ರಸಿದ್ಧಿ ಪಡೆದ ಭಗವಾನ್ ಬುದ್ಧರು ಕಾಲದೇಶಗಳನ್ನು ಮೀರಿ ವಿಶ್ವದುದ್ದಕ್ಕೂ ಬೆಳೆದ ಮಹಾನ್ ಮಾನವತಾವಾದಿ. ಅಹಿಂಸೆ, ಸತ್ಯ, ಕಾರುಣ್ಯವನ್ನೇ ಧರ್ಮವಾಗಿಸಿದ ಬುದ್ಧನ ಕುರಿತು ರಾಷ್ಟ್ರಕವಿ ಕುವೆಂಪು ಬರೆದ ಕವಿತೆ.

ಬುದ್ಧದೇವ:

ವಿಕಸಿತ ಸಹಸ್ರದಲ ಪದ್ಮಪೀಠದ ಮೇಲೆ

ಮಂಡಿಸಿಹ ಧವಲಿಮಾ ಧ್ಯಾನಸ್ತಿಮಿತಮೂರ್ತಿ,

ಹೇ ಬುದ್ಧದೇವ, ನಿನ್ನತುಲ ಬುದ್ಧಿಸ್ಫೂರ್ತಿ

ಮಾನವನ ಮೂರ್ಖತೆಯ ದಹಿಸುವ ಮಹಾಜ್ವಾಲೆ.

ಅರ್ಥವಿಲ್ಲದ ಕರ್ಮತತಿಯ ಮರುರಂಗದಲಿ

ಶುಷ್ಕ ಆಚಾರಸೈಕತದಲ್ಲಿ ನಡೆಗೆಟ್ಟು

ನಿರ್ಮಲ ವಿಚಾರನದಿ ಲಯವಾಗುತಿರೆ; ಕಟ್ಟು

ಕಟ್ಟಳೆಯ ಲೌಹ ಶೃಂಖಲೆಯ ಯಮಸಂಗದಲಿ

ಕುಬ್ಜವಾಗುತಲಿರಲು ಧರ್ಮದ ಮಹೋನ್ನತಿಯು,

ವೈರಾಗ್ಯವರ್ಷವನು ಕರೆದು, ಜನರಲಿ ಮತಿಯು

ಶ್ರುತಿಯ ಬಂಡೆಯ ಬಿರಿದು ಮೂಡುವಂತೆಸಗಿರುವೆ!

ಹೇ ಪುಣ್ಯಮತಿಮೂರ್ತಿ, ಮತದ ಮತಿಹೀನತೆಯು

ಸಾಕೆಮಗೆ; ಬೇಕು ಸನ್ಮತಿಯ ನಾಗರಿಕತೆಯು:

ನರನ ಸನ್ಮತಿಗಿಂತ ಬೇರೆಯ ಜಗದ್ಗುರುವೆ?

- ಕುವೆಂಪು

ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಸಂದೇಶಗಳು - 01 | K P Poornachandra Tejasvi Quotes

 ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪರಿಸರ ಸಂಬಂಧಿತ ಸಂದೇಶಗಳು:

1. ಈ ಜೀವ ಸಮುಚ್ಚಯದಲ್ಲಿ ಕ್ರಿಮಿಕೀಟಗಳು ಪಶುಪಕ್ಷಿಗಳು ತೋರಿಸುತ್ತಿರುವಷ್ಟು ಹೊಂದಾಣಿಕೆ ಮತ್ತು ಸಾಮರಸ್ಯಗಳನ್ನು ವಿವೇಕಿ ಮತ್ತು ಬುದ್ಧಿವಂತನಾದ ಮಾನವ ತೋರಿಸಲು ಸಾಧ್ಯವಿಲ್ಲವೇ? ಎನ್ನುವುದೇ ಈಗ ನಮ್ಮ ಮುಂದೆ ಇಕಾಲಜಿ ಇಟ್ಟಿರುವ ಪ್ರಶ್ನೆ.

2. ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ

3. ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು?

4. ಪರಿಸರ ಅನ್ನೋದು ಏನು? ಮನುಷ್ಯನ ಸಮಾಜ ಅನ್ನೋದು ಮತ್ತು ಮನುಷ್ಯನ ಆತ್ಮ ಅನ್ನೋದು ಈ ಮೂರು ಹಾಳಾದರು ಒಟ್ಟಿಗೆ ಹಾಳಾಗೋದು; ಉದ್ಧಾರ ಆದರೂ ಒಟ್ಟಿಗೆ ಉದ್ಧಾರ ಆಗೋದು!

5. ಕಾಲದೊಂದಿಗೆ ಸಂಸ್ಕೃತಿ ಬದಲಾಗುತ್ತಾ ಇರುತ್ತದೆ . ಬೇಕಾದದ್ದನ್ನು ಇಟ್ಟುಕೊಳ್ಳುತ್ತದೆ. ಬೇಡವಾದದ್ದನ್ನು ಬಿಡುತ್ತದೆ‌.

6. ಜೀವನ ಮಟ್ಟವನ್ನು ನಿರಂತರವಾಗಿ ಏರಿಸಬೇಕೆನ್ನುವ ದುರಾಸೆಯಲ್ಲಿ ಪ್ರಕೃತಿದತ್ತವಾದ ಸಂಪನ್ಮೂಲಗಳನ್ನೆಲ್ಲಾ ಮನುಷ್ಯ ಯದ್ವಾತದ್ವಾ ಲೂಟಿ ಮಾಡುತ್ತಿದ್ದಾನೆ.

7. ಯಾಂತ್ರಿಕ ಬದುಕು ಮನುಷ್ಯನನ್ನು ತನ್ನ ಪರಿಸರದಿಂದ ಹಾಗೂ ಕೌಟುಂಬಿಕ ಮಾನವೀಯ ವಾತಾವರಣದಿಂದ ಪ್ರತ್ಯೇಕಿಸುತ್ತಾ ತಾನೊಂದು ವಿಶ್ವಸಮಾಜದ ಅಂಶ ಎನ್ನುವ ತಿಳುವಳಿಕೆ ಮರೆಯಾಗುತ್ತಾ ಇದೆ. ಸಜೀವ ಜಗತ್ತಿನ ಸರ್ವ ಚರಾಚರ ವಸ್ತುಗಳೊಂದಿಗೇ ತಾನು ಬದುಕಬೇಕೆಂಬ ಅರಿವು ಮಾಯವಾಗುತ್ತಿದೆ. ಇದರಿಂದಾಗಿ ಆಧುನಿಕ ನಾಗರಿಕತೆಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

8. ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.

9. ವಿಶ್ವಪರಿಸರ ಸಂರಕ್ಷಣೆಯ ಹೋರಾಟಕ್ಕೆ ನಮ್ಮ ಓಬೀರಾಯನ ಕಾಲದ ನ್ಯಾಯ ಸಂಹಿತೆಗಳು ಮತ್ತು ಅಂಥದೇ ದೃಷ್ಟಿಕೋನವಿರುವ ನ್ಯಾಯಾಂಗಗಳು ಬಹು ದೊಡ್ಡ ಅಡ್ಡಿಯಾಗಿದ್ದಾರೆ. ಕಾಲ ಮೀರುವ ಮೊದಲೇ ನ್ಯಾಯಾಂಗ ಇದನ್ನು ತಿಳಿದು ತಾನೆ ಸ್ವತಃ ಏನಾದರೂ ಮಾಡದಿದ್ದರೆ ಬಹು ದೊಡ್ಡ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ.

10. ಆಹಾರದ ಪಿರಮಿಡ್ಡಿನ ಯಾವೊಂದು ಜೀವಸಂತಾನದ ಅಳಿವೂ ಕೊನೆಗೆ ಮುಂಬರಲಿರುವ ತನ್ನ ನಿರ್ವಂಶದ ಮುನ್ನುಡಿಯೇ ಎಂದು ಮಾನವನಿಗೆ ನಿಧಾನವಾಗಿ ಅರಿವಾಗುತ್ತಿದೆ.

11. ಇಕಾಲಜಿ ಎಂದರೆ ಇಡೀ ಜೀವಸ್ತರದ ಪರಸ್ಪರ ಸಂಬಂಧ, ಅವಲಂಬನೆಗಳ ಅಭ್ಯಾಸ. ಇಡೀ ವಿಶ್ವದ ಜೀವಸಮಸ್ತವನ್ನೂ ಅದರ ಪರಿಸರವನ್ನೂ ಒಂದು ವ್ಯಕ್ತಿತ್ವವನ್ನಾಗಿ ಕಾಣುವ ದರ್ಶನ.

ಕೆ. ಪಿ. ಪೂರ್ಣಚಂದ್ರ ತೇಜಸ್ವಿ

ಭಾರತೀಯ ಸಾಧಕರು - 01 | Achievers of India -01

 ಸಾಧಕರು: ಡಾ. ಎ.ಪಿ. ಜೆ ಅಬ್ದುಲ್ ಕಲಾಂ.

ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿಗಳು, ಲೇಖಕರು, ಚಿಂತಕರು ಆಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಹಿನ್ನೆಲೆಯ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅವರ ಬದ್ಧತೆ ಮತ್ತು ದೇಶಕ್ಕೆ ಅವರ ಸೇವೆ ಅವರಿಗೆ "ದೇಶದ ಕ್ಷಿಪಣಿ ಮನುಷ್ಯ ( Missile Man of India) ಎಂಬ ಬಿರುದನ್ನು ತಂದು ಕೊಟ್ಟಿದೆ.

ಬಾಲ್ಯ ಜೀವನ:

ಡಾ. ಎ.ಪಿ. ಜೆ ಅಬ್ದುಲ್ ಕಲಾಂ ಅವರು, ಅಕ್ಟೋಬರ್‌ 15,1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು, ಅವುಲ್ ಫಕೀರ್ ಜೈನಯಲಾಬ್ದೀನ್ ಅಬ್ದುಲ್ ಕಲಾಂ. ಇವರ ತಂದೆಯ ಹೆಸರು ಜೈನುಲಬ್ದೀನ್‌, ತಾಯಿ ಆಶೀಮಾ. ತಂದೆ ದೋಣಿಯ ಚಲಾಯಿಸುವ ವೃತ್ತಿ ಮಾಡುತ್ತಿದ್ದರೇ, ತಾಯಿ ಗೃಹಣಿ. ಇವರಿಗೆ ಐದು ಮಂದಿ ಸಹೋದರರು. ಅದರಲ್ಲಿ ಅಬ್ದುಲ್‌ ಕಲಾಂ ಅವರೇ ಚಿಕ್ಕವರು.


ವಿದ್ಯಾಭ್ಯಾಸ:

ಅಬ್ದುಲ್‌ ಕಲಾಂ ಅವರ ವಿದ್ಯಾರ್ಥಿ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ಕೂಡಿತ್ತು. ಆರಂಭಿಕ ದಿನಗಳಲ್ಲಿ ಅವರು ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ಮಾರಟ ಮಾಡುತ್ತಿದ್ದರು. ಅಬ್ದುಲ್‌ ಕಲಾಂ ಅವರ ಬದ್ಧತೆ ಮತ್ತು ಶಿಕ್ಷಣದ ಮೇಲಿನ ಪ್ರೀತಿ ಈ ಎಲ್ಲಾ ಕಷ್ಟಗಳನ್ನು ಎದುರಿಸಿ, ಮುಂದೇ ವಿಜ್ಞಾನಿಯಾಗಿ, ಭಾರತದ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಈ ಮೂಲಕ ಯುವ ಪೀಳಿಗೆಗೆ ಸ್ಪೋರ್ತಿ ಮತ್ತು ರೋಲ್‌ ಮಾಡೆಲ್‌ ಆಗಿ ಉಳಿದಿದ್ದಾರೆ.

ಅಬ್ದುಲ್‌ ಕಲಾಂ ಅವರು ಶ್ವಾರ್ಟ್ಜ್ ಮೆಟ್ರಿಕ್ಯುಲೇನ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, ನಂತರ ತಿರುಚಿರಾಪಳ್ಳಿಯಲ್ಲಿ ಸೇಂಟ್‌ ಜೋಸೆಫ್ಸ್‌ ಕಾಲೇಜಿಗೆ ಸೇರಿಕೊಂಡರು. ಅಲ್ಲಿಂದ ನಂತರ 1954 ರಲ್ಲಿ ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ಬೌತಶಾಸ್ತ್ರ ಪದವಿಯನ್ನು ಪಡೆದುಕೊಂಡರು. ನಂತರ ಮದ್ರಾಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್‌ಗೆ ತೆರಳಿದರು.


ಅಬ್ದುಲ್‌ ಕಲಾಂ ಅವರ ಮಹತ್ವದ ಸಾಧನೆಗಳು:

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಎರಡು ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ರಕ್ಷಾಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೇತೃತ್ವ ವಹಿಸಿದ್ದರು.

ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು(ಎಸ್‌ಎಲ್‌ವಿ) ಅಭಿವೃದ್ಧಿ ಪಡಿಸುವ ಯೋಜನೆಗೆ ಡಾ. ಕಲಾಂ ಅವರು ಇಸ್ರೋದಲ್ಲಿ ಸ್ತಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು.

ಜುಲೈ 1980 ರಲ್ಲಿ  ಕಲಾಂ ಅವರ ಮಾರ್ಗದರ್ಶನದಲ್ಲಿ ಭಾರತದ ಎಸ್‌ಎಲ್‌ವಿ-3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್‌ನ ಸದಸ್ಯರನ್ನಾಗಿ ಮಾಡಿದರು.

ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರು ಪ್ರೋಖ್ರಾನ್‌ನಲ್ಲಿ ಅನೇಕ ಪರಮಾಣು ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ಅಂದಿನ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರರಾಗಿ, ಪ್ರೋಖ್ರಾನ್-II ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸಿದ್ದರು.

ಅಬ್ದುಲ್‌ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 

ಅಬ್ದುಲ್‌ ಕಲಾಂ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. "ವಿಂಗ್ಸ್‌ ಆಫ್‌ ಫೈರ್" ಎಂಬುದು ಇವರ ಆತ್ಮಕಥೆಯಾಗಿದೆ. ಇವರು ಇಂಡಿಯಾ ಮೈ ಡ್ರೀಮ್, ಇಂಡಿಯಾ 2020, ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇ‍ಗಳನ್ನು ಹಾಕಿಕೊಟ್ಟಿದ್ದಾರೆ. ಮೈ ಜರ್ನಿ, ಟಾರ್ಗೆಟ್‌ ತ್ರಿ ಬಿಲಿಯನ್‌ ಇವು ಅವರ ಪ್ರಸಿದ್ದ ಪುಸ್ತಕಗಳಾಗಿವೆ.


ಕಲಾಂ ರವರಿಗೆ ದೊರಕಿರುವ ಪ್ರಶಸ್ತಿಗಳು:

ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲೆದು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ದೇಶದ ಐಕ್ಯತೆಯ ಇಂದಿರಾ ಗಾಂಧಿ ಪ್ರಶಸ್ರಿ, ರಾಮಾನುಜನ್ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. 1997 ರಲ್ಲಿ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಲ್ಲದೇ 1990ರಲ್ಲಿ ಪದ್ಮ ವಿಭೂಷಣ ಹಾಗೂ 1981 ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.


ಸರಳತೆ ಮತ್ತು ಉನ್ನತ ಚಿಂತನೆಗೆ ಹೆಸರಾಗಿದ್ದ ಇವರು, ಉಪನ್ಯಾಸ ನೀಡುತ್ತಲೇ ಜುಲೈ 27, 2015 ರಲ್ಲಿ ಶಿಲ್ಲಾಂಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕೊನೆಯುಸಿರೆಳೆದರು. ಇಂದಿಗೂ ಇವರನ್ನು ಅತ್ಯುತ್ತಮ ಮಾನವರಲ್ಲಿ ಒಬ್ಬರಾಗಿ ನೆನಪಿಸಿಕೊಳ್ಳಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...